83. (ದೂತರೇ), ಅವರು ನಿಮ್ಮೊಡನೆ ‘ಝಲ್ಕರ್ನೈನ್’ ಕುರಿತು ವಿಚಾರಿಸುತ್ತಾರೆ. ಹೇಳಿರಿ; ನಾನಿದೋ ಅವರ ವಿಷಯವನ್ನು
ನಿಮಗೆ ಕೇಳಿಸುತ್ತೇನೆ.
84. ನಾವು ಅವರಿಗೆ ಭೂಮಿಯಲ್ಲಿ
ಭಾರೀ ಅಧಿಕಾರವನ್ನು ನೀಡಿದ್ದೆವು ಮತ್ತು ಎಲ್ಲ ಬಗೆಯ ಸಂಪತ್ಸಾಧನಗಳನ್ನು ಒದಗಿಸಿದ್ದೆವು.
85. ಒಮ್ಮೆ ಅವರು,
ಒಂದು ಸಾಧನೆಗಾಗಿ ಹೊರಟರು.
86. ಕೊನೆಗೆ ಅವರು,
ಸೂರ್ಯನು ಅಸ್ತಮಿಸುವ ಸ್ಥಳವನ್ನು ತಲುಪಿದರು. ಅದು ಕೆಸರು ತುಂಬಿದ ಒಂದು ಚಿಲುಮೆಯಲ್ಲಿ
ಮುಳುಗುವುದನ್ನು ಅವರು ಕಂಡರು. ಅಲ್ಲಿ ಅವರಿಗೆ ಒಂದು ಜನಾಂಗವು ಸಿಕ್ಕಿತು. ನಾವು ಹೇಳಿದೆವು;
ಓ ಝಲ್ಕರ್ನೈನ್, ನೀನು ಅವರನ್ನು ದಂಡಿಸಬಹುದು ಅಥವಾ
ಅವರ ಜೊತೆ ಸೌಜನ್ಯದ ವರ್ತನೆಯನ್ನೂ ತೋರಬಹುದು.
87. ಅವರು ಹೇಳಿದರು;
ಅಕ್ರಮವೆಸಗಿದಾತನನ್ನು ನಾವು ಶಿಕ್ಷಿಸುವೆವು ಮತ್ತು ಆ ಬಳಿಕ ಅವನನ್ನು ತನ್ನ ಒಡೆಯನ
ಬಳಿಗೆ ಮರಳಿಸಲಾದಾಗ ಅವನು ಆತನಿಗೆ ತುಂಬಾ ಉಗ್ರ ಶಿಕ್ಷೆಯನ್ನು ನೀಡುವನು.
88. ಇನ್ನು, ವಿಶ್ವಾಸವಿಟ್ಟು,
ಸತ್ಕರ್ಮ ಮಾಡುವಾತನಿಗೆ (ಅಲ್ಲಾಹನ ಬಳಿ) ಅತ್ಯುತ್ತಮ ಪ್ರತಿಫಲವಿದೆ. ಜೊತೆಗೆ,
ನಾವೂ ಆತನೊಂದಿಗೆ ಸೌಮ್ಯವಾಗಿ ವರ್ತಿಸುವೆವು.
89. ಆ ಬಳಿಕ ಅವರು ಇನ್ನೊಂದು ಸಾಧನೆಗಾಗಿ
ಹೊರಟರು.
90. ಕೊನೆಗೆ ಅವರು,
ಸೂರ್ಯನು ಉದಯಿಸುವ ಸ್ಥಳವನ್ನು ತಲುಪಿದರು ಮತ್ತು ಅಲ್ಲಿ ಅದು, ಜನಾಂಗವೊಂದರ ಮೇಲೆ ಉದಯಿಸುವುದನ್ನು ಕಂಡರು. ಸೂರ್ಯನಿಂದ ಮರೆಯಾಗುವುದಕ್ಕೆ ಯಾವುದೇ ಆಶ್ರಯವನ್ನು
ನಾವು ಆ ಜನಾಂಗದವರಿಗೆ ಒದಗಿಸಿರಲಿಲ್ಲ.
91. ಹೀಗಿತ್ತು ಅವರ ಸ್ಥಿತಿ.
ಅತ್ತ, ಅವರ (ಝಲ್ಕರ್ನೈನ್ರ) ಬಳಿ ಏನಿತ್ತೆಂಬುದು ನಮಗೆ ಚೆನ್ನಾಗಿ ತಿಳಿದಿತ್ತು.
92. ಅವರು ಮತ್ತೊಂದು ಸಾಧನೆಗಾಗಿ
ಹೊರಟರು.
93. ಕೊನೆಗೆ ಅವರು ಎರಡು ಪರ್ವತಗಳ ನಡುವೆ
ಇದ್ದ ಸ್ಥಳವನ್ನು ತಲುಪಿದರು ಮತ್ತು ಅವೆರಡರ ನಡುವೆ ಒಂದು ಜನಾಂಗವನ್ನು ಕಂಡರು. ಅವರಿಗೆ ಯಾವ ಮಾತೂ
ಅರ್ಥವಾಗುತ್ತಿರಲಿಲ್ಲ.
94. ಅವರು (ಆ ನಾಡಿನವರು) ಹೇಳಿದರು;
ಓ ಝಲ್ಕರ್ನೈನ್, ಯಾಜೂಜ್ ಮತ್ತು ಮಾಜೂಜ್ ಭೂಮಿಯಲ್ಲಿ
ಅಶಾಂತಿ ಹಬ್ಬುತ್ತಿದ್ದಾರೆ. ನಾವು ನಿಮಗೆ ಶುಲ್ಕ ನೀಡಿದರೆ ನೀವು ನಮ್ಮ ಹಾಗೂ ಅವರ ನಡುವೆ ಒಂದು ಗೋಡೆಯನ್ನು
ನಿರ್ಮಿಸುವಿರಾ?
95. ಅವರು ಹೇಳಿದರು;
‘‘ನನಗೆ ನನ್ನ ಒಡೆಯನು ಧಾರಾಳ ಕೊಡುಗೆಗಳನ್ನು ನೀಡಿದ್ದಾನೆ. ನೀವು ಜನ ಬಲದ ಮೂಲಕ
ನನಗೆ ನೆರವಾಗಿರಿ. ನಾನು ನಿಮ್ಮ ಹಾಗೂ ಅವರ ನಡುವೆ ಒಂದು ತಡೆಗೋಡೆಯನ್ನು ನಿರ್ಮಿಸುವೆನು.’’
96. ‘‘ನೀವು ನನಗೆ ಉಕ್ಕಿನ
ಹಾಳೆಗಳನ್ನು ತಂದು ಕೊಡಿರಿ.’’ ಹೀಗೆ, ಅವರು ಎರಡು
ಪರ್ವತಗಳ ನಡುವಣ ಅಂತರವನ್ನು ಮುಚ್ಚಿದ ಬಳಿಕ, ‘‘ಇದನ್ನು ಚೆನ್ನಾಗಿ ಉರಿಸಿರಿ’’
ಎಂದು ಆದೇಶಿಸಿದರು. ಕೊನೆಗೆ ಅವರು ಅದನ್ನು ಬೆಂಕಿಯಾಗಿಸಿದರು. ಆಗ ಅವರು,
‘‘ಈಗ ನನ್ನ ಬಳಿಗೆ ಕರಗಿದ ತಾಮ್ರವನ್ನು ತನ್ನಿರಿ, ನಾನು
ಅದನ್ನು ಇದರ ಮೇಲೆ ಸುರಿಯುತ್ತೇನೆ’’ ಎಂದರು.
97. ಅವರಿಗೆ (ಯಾಜೂಜ್,
ಮಾಜೂಜ್ ಮತ್ತು ಅವರ ಪಡೆಗಳಿಗೆ) ಅದರ ಮೇಲೆ ಹತ್ತಿ ಬರಲಿಕ್ಕಾಗಲಿ, ಅದರಲ್ಲಿ ಕನ್ನ ಕೊರೆಯಲಿಕ್ಕಾಗಲಿ ಸಾಧ್ಯವಿರಲಿಲ್ಲ.
98. ಅವರು (ಝುಲ್ ಕರ್ನೈನ್)
ಹೇಳಿದರು; ಇದೆಲ್ಲಾ ನನ್ನ ಒಡೆಯನ ಕೃಪೆ. ಅವನ ವಾಗ್ದಾನಿತ ಸಮಯ ಬಂದಾಗ ಅವನು
ಇದನ್ನೆಲ್ಲಾ ನೆಲಸಮ ಗೊಳಿಸಿಬಿಡುವನು ಮತ್ತು ನನ್ನ ಒಡೆಯನ ವಾಗ್ದಾನ ಖಂಡಿತ ಸತ್ಯವಾಗಿರುತ್ತದೆ.
[ಕುರಾನ್, 18: 83-98]
No comments:
Post a Comment