60. ಮೂಸಾ, ತಮ್ಮ ಸೇವಕನೊಡನೆ, ‘‘ಎರಡು ಕಡಲುಗಳು ಒಂದುಗೂಡುವ ಸಂಗಮವು ಸಿಗುವ
ತನಕ ನಾನು ವಿರಮಿಸಲಾರೆ. ಅನ್ಯಥಾ ನಾನು ವರ್ಷಗಟ್ಟಲೆ ನಡೆಯುತ್ತಲೇ ಇರುವೆನು’’ ಎಂದರು.
61. ಕೊನೆಗೆ ಅವರಿಬ್ಬರೂ ಎರಡು
ಕಡಲುಗಳ ಸಂಗಮವನ್ನು ತಲುಪಿದಾಗ, ಅವರು ತಮ್ಮ ಮೀನನ್ನು ಮರೆತರು. ಅದು,
ಸುರಂಗದಿಂದಲೋ ಎಂಬಂತೆ ಸಮುದ್ರದೊಳಕ್ಕೆ ತನ್ನ ದಾರಿಯನ್ನು ಕಂಡು ಕೊಂಡಿತ್ತು.
62. ಹೀಗೆ, ಅವರಿಬ್ಬರೂ
ಮುಂದೆ ಹೋದಾಗ ಅವರು ತಮ್ಮ ಶಿಷ್ಯನೊಡನೆ, ನಮಗೆ ನಮ್ಮ ಆಹಾರವನ್ನು ತಂದು
ಕೊಡು. ನಾವು ಈ ನಮ್ಮ ಪ್ರಯಾಣದಲ್ಲಿ ತುಂಬಾ ದಣಿದಿದ್ದೇವೆ ಎಂದರು.
63. ಅವನು ಹೇಳಿದನು;
ನೋಡಿದಿರಾ, ನಾವು ಆ ಬಂಡೆಯ ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ
ನಾನು ಆ ಮೀನನ್ನು ಮರೆತುಬಿಟ್ಟಿದ್ದೆ ನಿಜವಾಗಿ ನಾನು ಅದನ್ನು ಮರೆಯಲು ಶೈತಾನನೇ ಕಾರಣ. ಅದು (ಮೀನು)
ವಿಚಿತ್ರ ರೀತಿಯಲ್ಲಿ ನದಿಯೊಳಕ್ಕೆ ತನ್ನ ದಾರಿಯನ್ನು ಕಂಡುಕೊಂಡಿತು.
64. ಅವರು, ‘‘ನಾವು ಹುಡುಕುತ್ತಿದ್ದುದು ಅದೇ ಸ್ಥಳವನ್ನು’’ ಎಂದರು. ಹೀಗೆ,
ಅವರು ತಾವು ಬಂದ ದಾರಿಯಲ್ಲೇ ಹಿಂದಕ್ಕೆ ಹೊರಟರು.
65. ಕೊನೆಗೆ ಅವರು,
ನಮ್ಮ ಒಬ್ಬ ದಾಸನನ್ನು ಕಂಡರು. ನಾವು ನಮ್ಮ ಕಡೆಯಿಂದ ಆತನಿಗೆ ವಿಶೇಷ ಅನುಗ್ರಹವನ್ನು
ನೀಡಿದ್ದೆವು ಮತ್ತು ನಮ್ಮ ಕಡೆಯಿಂದ ವಿಶೇಷ ಜ್ಞಾನವನ್ನು ದಯಪಾಲಿಸಿದ್ದೆವು.
66. ‘‘ನಿಮಗೆ ಕಲಿಸಲಾಗಿರುವ
ಜ್ಞಾನವನ್ನು ನೀವು ನನಗೆ ಕಲಿಸುವಂತಾಗಲು ನಾನು ನಿಮ್ಮ ಜೊತೆಗೆ ಬರಲೇ?’’ ಎಂದು ಅವರೊಡನೆ ಮೂಸಾ ಕೇಳಿದರು.
67. ಅವರು ಹೇಳಿದರು;
‘‘ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದು.
68. ನಿಮ್ಮ ತಿಳುವಳಿಕೆಯ ವ್ಯಾಪ್ತಿಯಲ್ಲಿ
ಇಲ್ಲದ ವಿಷಯಗಳ ಕುರಿತು ನೀವು ಸಹನೆ ತೋರುವುದಾದರೂ ಹೇಗೆ?’’
69. ಅವರು (ಮೂಸಾ) ಹೇಳಿದರು;
ಅಲ್ಲಾಹನು ಇಚ್ಛಿಸಿದರೆ, ನೀವು ನನ್ನನ್ನು ಸಹನಶೀಲನಾಗಿ
ಕಾಣುವಿರಿ ಮತ್ತು ನಾನು ನಿಮ್ಮ ಯಾವ ಆಜ್ಞೆಯನ್ನೂ ಮೀರಲಾರೆ.
70. ‘‘ನೀವು ನನ್ನ ಜೊತೆಗಿರಬೇಕಿದ್ದರೆ,
ಯಾವುದೇ ವಿಷಯದಲ್ಲಿ ನಾನೇ ನಿಮ್ಮೊಡನೆ ಪ್ರಸ್ತಾಪಿಸುವ ತನಕ ನೀವು ನನ್ನನ್ನು ಪ್ರಶ್ನಿಸಬಾರದು’’
ಎಂದು ಅವರು ಹೇಳಿದರು.
71. ಕೊನೆಗೆ ಅವರಿಬ್ಬರೂ ಹೊರಟರು.
ಮುಂದೆ ಅವರು ಒಂದು ಹಡಗನ್ನೇರಿದಾಗ ಆ ವ್ಯಕ್ತಿಯು ಹಡಗಿನಲ್ಲಿ ಒಂದು ರಂಧ್ರವನ್ನು ಕೊರೆದರು. ಆಗ ಅವರು
(ಮೂಸಾ) ‘‘ನೀವೇನು ಹಡಗಿನವರನ್ನು ಮುಳುಗಿಸಲಿಕ್ಕಾಗಿ ಆ ರಂಧ್ರವನ್ನು ಕೊರೆದಿರಾ?
ನೀವು ತೀರಾ ವಿಚಿತ್ರ ಕೆಲಸ ಮಾಡಿದಿರಿ’’ ಎಂದರು.
72. ಅವರು ಹೇಳಿದರು;
‘‘ನನ್ನ ಜೊತೆ ಸಹನಶೀಲನಾಗಿರಲು ನಿಮಗೆ ಸಾಧ್ಯವಿಲ್ಲವೆಂದು ನಾನು ನಿಮಗೆ ಹೇಳಿರಲಿಲ್ಲವೇ?’’
73. ಅವರು (ಮೂಸಾ) ‘‘ಮರೆವಿನಿಂದಾಗಿ ನನ್ನಿಂದ ಆದ ತಪ್ಪಿಗಾಗಿ ನೀವು ನನ್ನನ್ನು ದಂಡಿಸಬೇಡಿ ಮತ್ತು ನನ್ನ ವಿಷಯದಲ್ಲಿ
ಕಠೋರ ನೀತಿಯನ್ನು ಅನುಸರಿಸಬೇಡಿ’’ ಎಂದರು.
74. ತರುವಾಯ ಅವರಿಬ್ಬರೂ ಮುಂದೆ
ಸಾಗಿದರು. ಅವರೊಬ್ಬ ಹುಡುಗನನ್ನು ಎದುರುಗೊಂಡರು. ಆ ವ್ಯಕ್ತಿ ಆ ಹುಡುಗನನ್ನು ಕೊಂದು ಬಿಟ್ಟರು. ಆಗ
ಅವರು (ಮೂಸಾ) ‘‘ಯಾರದೇ ಹತ್ಯೆ ನಡೆಸಿಲ್ಲದ ಒಬ್ಬ ಮುಗ್ಧ ಜೀವಿಯನ್ನು ನೀವು
ಕೊಂದು ಬಿಟ್ಟಿರಾ? ನೀವು ನಿಜಕ್ಕೂ ಒಂದು ದೊಡ್ಡ ಪಾಪ ಕೃತ್ಯವನ್ನು ಮಾಡಿದಿರಿ’’
ಎಂದರು.
75. ಆ ವ್ಯಕ್ತಿ ಹೇಳಿದರು;
ನನ್ನ ಜೊತೆ ಸಹನಶೀಲರಾಗಿರಲು ನಿಮಗೆ ಸಾಧ್ಯವಾಗದೆಂದು ನಾನು ನಿಮ್ಮೊಡನೆ ಹೇಳಿರಲಿಲ್ಲವೇ
?
76. ಅವರು (ಮೂಸಾ) ಹೇಳಿದರು; ಇನ್ನು ನಾನು ನಿಮ್ಮೊಡನೆ
ಏನಾದರೂ ಪ್ರಶ್ನೆ ಕೇಳಿದರೆ, ಮತ್ತೆ ನೀವು ನನ್ನನ್ನು ನಿಮ್ಮ ಜೊತೆಗಾರನಾಗಿ
ಇಟ್ಟು ಕೊಳ್ಳಬೇಡಿ. ನಿಮ್ಮ ಮುಂದಿಡುವುದಕ್ಕೆ ನನ್ನ ಬಳಿ ಇನ್ನಾವುದೇ ನೆಪ ಉಳಿದಿಲ್ಲ.
77. ಅವರಿಬ್ಬರೂ ಮತ್ತೆ ಹೊರಟರು.
ಅವರು ಒಂದು ಗ್ರಾಮದವರ ಬಳಿಗೆ ತಲುಪಿ, ಅವರೊಡನೆ ಆಹಾರವನ್ನು ಕೇಳಿದರು.
ಆದರೆ ಅವರು ಇವರಿಗೆ ಆತಿಥ್ಯ ನೀಡಲು ನಿರಾಕರಿಸಿದರು. ಮುಂದೆ ಅವರು ಅಲ್ಲಿ ಒಂದು ಗೋಡೆಯನ್ನು ಕಂಡರು.
ಅದು ಬೀಳುವುದರಲ್ಲಿತ್ತು. ಆ ವ್ಯಕ್ತಿ ಅದನ್ನು ಸ್ಥಿರಗೊಳಿಸಿದರು. ಆಗ ಅವರು (ಮೂಸಾ),
‘‘ನೀವು ಬಯಸಿದ್ದರೆ ಈ ಕೆಲಸಕ್ಕಾಗಿ ವೇತನ ಪಡೆಯ ಬಹುದಿತ್ತು’’ ಎಂದರು.
78. ಆ ವ್ಯಕ್ತಿ ಹೇಳಿದರು; ಇದು ನನ್ನ ಮತ್ತು ನಿಮ್ಮ ನಡುವಿನ ವಿದಾಯದ ಹಂತವಾಗಿದೆ. ನಾನೀಗ, ನಿಮಗೆ ಅಸಹನೀಯವಾಗಿದ್ದ ವಿಷಯಗಳ ವಾಸ್ತವವನ್ನು ತಿಳಿಸುತ್ತೇನೆ.
79. ಆ ಹಡಗು ಕಡಲಲ್ಲಿ ಶ್ರಮಿಸುವ ಕೆಲವು ಬಡವರದಾಗಿತ್ತು. ನಾನು ಅದಕ್ಕೆ
ಹಾನಿ ಮಾಡಲು ಹೊರಟಿದ್ದೇಕೆಂದರೆ, (ಪ್ರಯಾಣದ) ಮುಂದಿನ ಹಂತದಲ್ಲಿ ಒಬ್ಬ
ರಾಜನಿದ್ದನು – ಅವನು (ಸುಸ್ಥಿತಿಯಲ್ಲಿರುವ) ಪ್ರತಿಯೊಂದು ಹಡಗನ್ನೂ ಬಲವಂತವಾಗಿ
ವಶಪಡಿಸಿಕೊಳ್ಳುತ್ತಿದ್ದನು.
80. ಇನ್ನು ಆ ಬಾಲಕ. ಅವನ ತಾಯಿ –
ತಂದೆ ವಿಶ್ವಾಸಿಗಳಾಗಿದ್ದರು. ಅವನು ತನ್ನ ವಿದ್ರೋಹ ಹಾಗೂ ಧಿಕ್ಕಾರದ ಮೂಲಕ ಅವರನ್ನು
ಪೀಡಿಸಬಹುದೆಂಬ ಆಶಂಕೆ ನಮಗಿತ್ತು.
81. ಆದ್ದರಿಂದ ಆತನ ಬದಲಿಗೆ,
ಆತನಿಗಿಂತ ಹೆಚ್ಚು ಶುದ್ಧ ಚರಿತನಾದ ಹಾಗೂ ಹೆಚ್ಚು ದಯೆ ಇರುವ ಒಬ್ಬಾತನನ್ನು ಅವರ
ಒಡೆಯನು ಅವರಿಗೆ ಕೊಡಬೇಕೆಂದು ನಾವು ಬಯಸಿದೆವು.
82. ಇನ್ನು ಆ ಗೋಡೆಯ ಸಂಗತಿ
ಏನೆಂದರೆ, ಅದು ಊರಿನ ಇಬ್ಬರು ಅನಾಥ ಬಾಲಕರಿಗೆ ಸೇರಿತ್ತು. ಅವರಿಗೆ ಸೇರಿದ
ಖಜಾನೆಯೊಂದು ಅದರ ತಳದಲ್ಲಿತ್ತು. ಅವರ ತಂದೆ ಒಬ್ಬ ಸಜ್ಜನನಾಗಿದ್ದನು. ಅವರಿಬ್ಬರೂ ತಮ್ಮ ಯವ್ವನವನ್ನು
ತಲುಪಿ, ತಮ್ಮ ಖಜಾನೆಯನ್ನು ಹೊರ ತೆಗೆಯಬೇಕೆಂಬುದು ನಿಮ್ಮ ಒಡೆಯನ ನಿರ್ಧಾರವಾಗಿತ್ತು.
ಇದೆಲ್ಲಾ ನಿಮ್ಮ ಒಡೆಯನ ಕರುಣೆ. ನಾನು ಇದಾವುದನ್ನೂ ನನ್ನ ಇಚ್ಛೆಯಿಂದ ಮಾಡಿಲ್ಲ. ನಿಮಗೆ ಸಹಿಸಲಿಕ್ಕಾಗದ
ವಿಷಯಗಳ ವಾಸ್ತವ ಇದು.
[ಕುರಾನ್, 18:
60-82]
No comments:
Post a Comment