Monday, February 3, 2014

ಸೂರ ಯಾಸೀನ್ ನಾಡಿನವರ ಸಮಾಚಾರ

13. ನೀವು ಅವರಿಗೆ ಆ ನಾಡಿನವರ ಸಮಾಚಾರವನ್ನು ತಿಳಿಸಿರಿ; ಅವರ ಬಳಿಗೆ ದೂತರು ಬಂದಿದ್ದರು.

14. ನಾವು ಅವರ ಬಳಿಗೆ ಇಬ್ಬರು ದೂತರನ್ನು ಕಳಿಸಿದಾಗ ಅವರಿಬ್ಬರನ್ನೂ ಅವರು ತಿರಸ್ಕರಿಸಿದರು. ಕೊನೆಗೆ ನಾವು ಮೂರನೆಯ ದೂತನ ಮೂಲಕ ಅವರಿಗೆ ಬಲ ಒದಗಿಸಿದೆವು. ‘‘ನಮ್ಮನ್ನು ಖಚಿತವಾಗಿ ನಿಮ್ಮೆಡೆಗೇ ರವಾನಿಸಲಾಗಿದೆ’’ ಎಂದು ಅವರು ಹೇಳಿದರು.

15. ಆಗ ಅವರು (ನಾಡಿನವರು) ಹೇಳಿದರು; ನೀವು ನಮ್ಮಂತಹ ಮಾನವರು ಮಾತ್ರ. ಆ ಪರಮ ದಯಾಮಯನು (ಅಲ್ಲಾಹನು) ಏನನ್ನೂ ಇಳಿಸಿಕೊಟ್ಟಿಲ್ಲ. ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.

16. ಅವರು (ದೂತರು) ಹೇಳಿದರು; ನಾವು ನಿಮ್ಮೆಡೆಗೆ ಕಳಿಸಲ್ಪಟ್ಟವರು ಎಂಬುದನ್ನು ನಮ್ಮೊಡೆಯನು ಖಚಿತವಾಗಿ ಬಲ್ಲನು.

17. ನಮ್ಮ ಮೇಲಿರುವುದು ಸ್ಪಷ್ಟವಾಗಿ ಸಂದೇಶ ತಲುಪಿಸಿ ಬಿಡುವ ಹೊಣೆ ಮಾತ್ರ.

18. ಅವರು (ನಾಡಿನವರು) ಹೇಳಿದರು; ನಾವು ನಿಮ್ಮನ್ನು ಕೇವಲ ಅಪಶಕುನಗಳಾಗಿ ಕಂಡಿರುವೆವು. ನೀವು ದೂರ ನಿಲ್ಲದಿದ್ದರೆ (ಸತ್ಯಪ್ರಚಾರವನ್ನು ನಿಲ್ಲಿಸದಿದ್ದರೆ) ನಾವು ನಿಮ್ಮನ್ನು ಕಲ್ಲೆಸೆದು ಕೊಲ್ಲುವೆವು ಮತ್ತು ಖಂಡಿತವಾಗಿಯೂ ನಮ್ಮ ಕಡೆಯಿಂದ ನಿಮಗೆ ಕಠಿಣ ಶಿಕ್ಷೆ ಸಿಗುವುದು.

19. ಆಗ ಅವರು (ದೂತರು) ಹೇಳಿದರು; ನಿಮ್ಮ ಅಪಶಕುನವೆಲ್ಲಾ ನಿಮ್ಮ ಜೊತೆಗೇ ಇದೆ. ನಿಮಗೆ ಬೋಧನೆ ತಲುಪಿದೆಯಲ್ಲವೇ? ನಿಜವಾಗಿ ನೀವು ಎಲ್ಲೆ ಮೀರುವವರಾಗಿದ್ದೀರಿ.

20. ನಗರದ ಮೂಲೆಯಿಂದ ಧಾವಿಸಿಬಂದ ಒಬ್ಬ ವ್ಯಕ್ತಿ ಹೇಳಿದನು; ನನ್ನ ಜನಾಂಗದವರೇ, ದೇವದೂತರನ್ನು ಅನುಸರಿಸಿರಿ.

21. ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸದ ಹಾಗೂ ಮಾರ್ಗದರ್ಶನ ಪಡೆದಿರುವ, ಅವರನ್ನು ಅನುಸರಿಸಿರಿ.

22. ನನ್ನನ್ನು ರೂಪಿಸಿದಾತನನ್ನು ನಾನೇಕೆ ಪೂಜಿಸಬಾರದು? ಕೊನೆಗಂತು, ನಿಮ್ಮೆಲ್ಲರನ್ನೂ ಅವನ ಕಡೆಗೇ ಮರಳಿಸಲಾಗುವುದು.

23. ನಾನೇನು, ಅವನ ಹೊರತು ಇತರ ಯಾರನ್ನಾದರೂ ದೇವರಾಗಿಸಿಕೊಳ್ಳಬೇಕೆ? ನಿಜವಾಗಿ, ಆ ಪರಮ ದಯಾಳು ನನಗೇನಾದರೂ ಹಾನಿಯನ್ನುಂಟು ಮಾಡ ಬಯಸಿದರೆ, ಅವರ (ಅನ್ಯರ) ಶಿಫಾರಸ್ಸು ನನ್ನ ಯಾವ ಕೆಲಸಕ್ಕೂ ಬಾರದು ಮತ್ತು ನನ್ನನ್ನು ರಕ್ಷಿಸಲು ಅವರಿಗೆ ಸಾಧ್ಯವಾಗದು.

24. ಹಾಗೆ ಮಾಡಿದರೆ (ಅನ್ಯರನ್ನು ಪೂಜಿಸಿದರೆ), ನಾನು ಸ್ಪಷ್ಟ ದಾರಿಗೇಡಿತನದಲ್ಲಿ ಇದ್ದಂತಾಗುವುದು.

25. ನೀವು ನನ್ನ ಮಾತನ್ನು ಕೇಳಿರಿ ನಾನು ನಿಮ್ಮ ನೈಜ ಒಡೆಯನನ್ನು ನಂಬಿದ್ದೇನೆ.


26. (ಅವರು ಆತನನ್ನು ಕೊಂದಾಗ) ಸ್ವರ್ಗವನ್ನು ಪ್ರವೇಶಿಸುಎಂದು ಅವನೊಡನೆ ಹೇಳಲಾಯಿತು. ಅವನು ಹೇಳಿದನು; ‘‘ಅಯ್ಯೋ, ನನ್ನ ಜನಾಂಗದವರಿಗೆ (ಇದು) ತಿಳಿದಿದ್ದರೆ ಎಷ್ಟು ಚೆನ್ನಾಗಿತ್ತು!’’
[ಕುರಾನ್, 36: 13-26]

No comments:

Post a Comment