Monday, February 3, 2014

ನಂಬ ಬೇಡಿ! ಶೈತಾನ್ ಮಹಾ ದ್ರೋಹಿಯಾಗಿದ್ದಾನೆ

18. ತಮ್ಮ ಒಡೆಯನನ್ನು ಧಿಕ್ಕರಿಸಿದವರ ಸ್ಥಿತಿಯು ಹೀಗಿದೆ; ಅವರ ಕರ್ಮಗಳು, ಬಿರುಗಾಳಿ ಬೀಸಿದ ದಿನ ಅದರ ಜೊತೆ ಹಾರಿ ಹೋಗುವ ಬೂದಿಗೆ ಸಮಾನವಾಗಿವೆ. ತಮ್ಮ ಯಾವ ಸಂಪಾದನೆಯ ಮೇಲೂ ಅವರಿಗೆ ಯಾವುದೇ ನಿಯಂತ್ರಣ ಇರಲಾರದು. ಇದುವೇ ದುರ್ಮಾರ್ಗದಲ್ಲಿನ ಬಹುದೂರದ ಹಂತವಾಗಿದೆ.

19. ಅಲ್ಲಾಹನು ಆಕಾಶಗಳನ್ನು ಹಾಗೂ ಭೂಮಿಯನ್ನು ಕರಾರುವಕ್ಕಾಗಿ ಸೃಷ್ಟಿಸಿರುವುದನ್ನು ನೀವು ಕಾಣುತ್ತಿಲ್ಲವೇ,? ಅವನು ಬಯಸಿದರೆ, ನಿಮ್ಮನ್ನು ತೊಲಗಿಸಿ ಹೊಸ ಜೀವ ಜಾತಿಯೊಂದನ್ನು ತರಬಲ್ಲನು.

20. ಅಲ್ಲಾಹನ ಮಟ್ಟಿಗೆ ಅದು ಕಷ್ಟದ ಕೆಲಸವೇನಲ್ಲ.

21. ಅವರೆಲ್ಲರೂ ಅಲ್ಲಾಹನೆದುರು ಹಾಜರಾಗುವರು. (ಆಗ) ದೊಡ್ಡಸ್ತಿಕೆ ತೋರುತ್ತಿದ್ದವರೊಡನೆ ದುರ್ಬಲರು, ‘‘ನಾವು ನಿಮಗೆ ಅಧೀನರಾಗಿದ್ದೆವು. ನೀವೀಗ ನಮ್ಮ ಮೇಲಿಂದ ಅಲ್ಲಾಹನ ಶಿಕ್ಷೆಯನ್ನು ಸ್ವಲ್ಪವಾದರೂ ನಿವಾರಿಸಬಲ್ಲಿರಾ?’’ ಎಂದು ಕೇಳುವರು. ಅವರು ಹೇಳುವರು; ಒಂದುವೇಳೆ ಅಲ್ಲಾಹನು ನಮಗೆ ಸರಿ ದಾರಿಯನ್ನು ತೋರಿದ್ದರೆ ನಾವು ನಿಮಗೆ ಸರಿ ದಾರಿ ತೋರಿಸುತ್ತಿದ್ದೆವು. ಈಗ ನಾವು ರೋದಿಸಿದರೂ ಒಂದೇ, ಸಹಿಸಿಕೊಂಡರೂ ಒಂದೇ. ನಮಗೆ ಉಳಿವಂತೂ ಇಲ್ಲ.

22. (ಅಂತಿಮ ವಿಚಾರಣೆಯ ದಿನ) ಎಲ್ಲವೂ ತೀರ್ಮಾನವಾದ ಬಳಿಕ ಶೈತಾನನು ಹೇಳುವನು; ನಿಮಗೆ ಅಲ್ಲಾಹನು ಮಾಡಿದ ವಾಗ್ದಾನವೇ ಸತ್ಯದ ವಾಗ್ದಾನವಾಗಿತ್ತು. ನಾನೂ ನಿಮಗೆ ವಾಗ್ದಾನ ಮಾಡಿದ್ದೆನು. ಆದರೆ ನಾನು ಅದನ್ನು ಮುರಿದು ಬಿಟ್ಟೆನು. ನನಗೆ ನಿಮ್ಮ ಮೇಲೆ ಯಾವುದೇ ನಿಯಂತ್ರಣವಿರಲಿಲ್ಲ. ನಾನು ನಿಮ್ಮನ್ನು ಆಮಂತ್ರಿಸಿದೆ. ನೀವು ನನ್ನ ಕರೆಗೆ ಓಗೊಟ್ಟಿರಿ. (ಇಂದು) ನನ್ನನ್ನು ದೂಷಿಸಬೇಡಿ. ನೀವು ಸ್ವತಃ ನಿಮ್ಮನ್ನೇ ದೂಷಿಸಿರಿ. (ಇಂದು) ನಿಮ್ಮ ನೋವನ್ನು ನಾನು ನೀಗಿಸಲಾರೆ ಮತ್ತು ನನ್ನ ನೋವನ್ನು ನೀವು ನೀಗಿಸಲಾರಿರಿ. ಈ ಹಿಂದೆ ನೀವು ನನ್ನನ್ನು (ದೇವರ) ಪಾಲುದಾರನಾಗಿಸಿದ್ದನ್ನು ನಾನು ಧಿಕ್ಕರಿಸುತ್ತೇನೆ. ಅಕ್ರಮಿಗಳಿಗೆ ಖಂಡಿತ ಕಠಿಣ ಶಿಕ್ಷೆ ಕಾದಿದೆ.
[ಕುರಾನ್, 14: 18-22]

No comments:

Post a Comment