Friday, April 25, 2014

ವಿಪತ್ತು ಆಶಿಸುವುದು ವಿಶ್ವಾಸಿಗೆ ಸಲ್ಲ


ಅಲ್ಲಾಹನು ಯಾರ ಮೇಲೂ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಹೊರೆಯನ್ನು ಹೊರಿಸುವುದಿಲ್ಲ. ಪ್ರತಿಯೊಬ್ಬನಿಗೂ ಅವನು ಸಂಪಾದಿಸಿದ ಒಳಿತಿನ ಫಲವು ಸಿಗಲಿದೆ ಮತ್ತು ಅವನು ಗಳಿಸಿದ ಕೆಡುಕಿನ ಪ್ರತಿಫಲವೂ ಸಿಗಲಿದೆ. ‘‘ನಮ್ಮೊಡೆಯಾ, ನಾವು ಮರೆತರೆ ಅಥವಾ ನಮ್ಮಿಂದ ಪ್ರಮಾದವಾಗಿ ಬಿಟ್ಟರೆ ನಮ್ಮನ್ನು ದಂಡಿಸಬೇಡ. ನಮ್ಮೊಡೆಯಾ, ನಮಗಿಂತ ಹಿಂದಿನವರ ಮೇಲೆ ನೀನು ಹೊರಿಸಿದಂತಹ ಹೊರೆಗಳನ್ನು ನಮ್ಮ ಮೇಲೆ ಹೊರಿಸಬೇಡ. ನಮ್ಮೊಡೆಯಾ, ನಮಗೆ ಹೊರಲಾಗದ ಹೊರೆಗಳನ್ನೂ ನಮ್ಮ ಮೇಲೆ ಹೊರಿಸಬೇಡ ಮತ್ತು ನೀನು ನಮ್ಮನ್ನು ಮನ್ನಿಸು, ನಮ್ಮನ್ನು ಕ್ಷಮಿಸು ಮತ್ತು ನಮ್ಮ ಮೇಲೆ ಕರುಣೆ ತೋರು. ನೀನೇ ನಮ್ಮ ರಕ್ಷಕನು. ಧಿಕ್ಕಾರಿಗಳ ವಿರುದ್ಧ ನೀನು ನಮಗೆ ನೆರವಾಗು’’(ಎಂದು ಪ್ರಾರ್ಥಿಸಿರಿ). 
[ಕುರಾನ್, 2: 286]


ಆದುದರಿಂದ ವಿಶ್ವಾಸಿಯೊಬ್ಬ ಅಲ್ಲಾಹನ ಅಪಾರ ಕರುಣೆ ಹಾಗೂ ಕ್ಷಮಾಗುಣಗಳ ಅನುಕೂಲತೆಗಳನ್ನು ಉಪಯೋಗಿಸಿಕೊಳ್ಳಬೇಕಾಗಿದೆ. ಅನಸ್ [ರ] ವರದಿ ಮಾಡಿರುತ್ತಾರೆ, "ಪ್ರವಾದಿ [ಸ]ಯವರು ಒಮ್ಮೆ ಕೃಶಕಾಯ ಹಾಗೂ ದುರ್ಬಲರಾದ (ಸ್ಥೂಲಕಾಯದ) ವ್ಯಕ್ತಿಯೊಬ್ಬನನ್ನು ಸಂದರ್ಶಿಸಿದರು.
ಪ್ರವಾದಿ [ಸ] ಆ ವ್ಯಕ್ತಿಯೊಂದಿಗೆ ಕೇಳಿದರು, "ತಾವು ಅಲ್ಲಾಹನಲ್ಲಿ ಯಾವುದಾದರೂ ವಿಶಿಷ್ಟ ಪಾರ್ಥನೆಯನ್ನು ಮಾಡುತ್ತಿರುವಿರಾ"? (ಯಾಕೆಂದರೆ ನೀವು ಈ ರೀತಿ ದುರ್ಬಲರಾಗಿರುವಿರಿ). ಆಗ ಆ ವ್ಯಕ್ತಿ ಉತ್ತರಿಸಿದರು, "ಹೌದು, ನಾನು ಈ ರೀತಿ ಪ್ರಾರ್ಥಿಸುತ್ತಿದ್ದೇನೆ, "ಓ ಅಲ್ಲಾಹನೇ ನನಗಾಗಿ ಪರಲೋಕದಲ್ಲಿ ನೀನು ನಿಶ್ಚಯಿಸಿಟ್ಟ ಶಿಕ್ಷೆಗಳೇನಿವೆಯೋ ಅವಲ್ಲವನ್ನು ಇಹಲೋಕದಲ್ಲೇ ನೀಡಿಬಿಡು." ಇದನ್ನು ಆಲಿಸಿದ ಅಲ್ಲಾಹನ ಸಂದೇಶವಾಹಕರು [ಸ] ಹೇಳಿದರು, ಸರ್ವಸ್ತುತಿಗಳು ಅಲ್ಲಾಹನಿಗೆ! ನೀವು ಈ ರೀತಿ ಪ್ರಾರ್ಥಿಸುವಂತಿಲ್ಲ. ಬದಲಾಗಿ ಈ ರೀತಿ ಪ್ರಾರ್ಥಿಸಿರಿ: 
"ನಮ್ಮ ಪಾಲಕಪ್ರಭುವೇ, ನಮಗೆ ಇಹಲೋಕದಲ್ಲೂ, ಪರಲೋಕದಲ್ಲೂ ಒಳಿತನ್ನು ದಯಪಾಲಿಸು, ಮತ್ತು ನಮ್ಮನ್ನು ನರಕಾಗ್ನಿಯಿಂದ ರಕ್ಷಿಸು"
[ಕುರಾನ್, 2: 201]
ಪ್ರವಾದಿ [ಸ]ಯವರು ತದನಂತರ ಅಲ್ಲಾಹನಲ್ಲಿ ಆ ವ್ಯಕ್ತಿಯನ್ನು ಗುಣಪಡಿಸುವಂತೆ ಬೇಡಿಕೊಂಡರು ಮತ್ತು ಅಲ್ಲಾಹು ಅವರನ್ನು ಸ್ವಸ್ಥಪಡಿಸಿದನು." 
[ಸಹೀಹ್ ಮುಸ್ಲಿಮ್]

No comments:

Post a Comment