ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ಪುನರುತ್ಥಾನ ದಿವಸ ಬಂದರೆ, ಮನುಷ್ಯರೆಲ್ಲ ಸೇರಿ ಆದಮ್ [ಅ] ಬಳಿಗೆ ಹೋಗಿ ಹೇಳುವರು - ನಿಮ್ಮ ಪ್ರಭುವಿನೊಂದಿಗೆ ನಮಗಾಗಿ ಶಿಫಾರಸು ಮಾಡಿ. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಇಬ್ರಾಹೀಂ ಹತ್ತಿರ ಹೋಗಿರಿ. ಅವರು ಕರುಣಾಳುವಾದ ಪ್ರಭುವಿನ ಆಪ್ತ ಮಿತ್ರರಾಗಿದ್ದಾರೆ. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಮೂಸಾ [ಅ] ಬಳಿಗೆ ಹೋಗಿರಿ. ಅವರ ಅಲ್ಲಾಹನ ಕಲೀಮ್ (ನೇರವಾಗಿ ಮಾತಾಡಿದವರು) ಆಗಿದ್ದಾರೆ.
ಹಾಗೆ ಅವರು ಮೂಸಾ [ಅ] ಬಳಿಗೆ ಹೋಗುವರು. ಹಾಗೆ ಅವರು ಮೂಸಾ [ಅ]ರ ಬಳಿಗೆ ಹೋಗುವರು. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಈಸಾ [ಅ] ಬಳಿಗೆ ಹೋಗಿರಿ. ಅವರು ಅಲ್ಲಾಹನ ಆಜ್ಜೆ ಮತ್ತು ವಚನವಾಗಿದ್ದಾರೆ. ಹೀಗೆ ಅವರು ಈಸಾ [ಅ]ರವರ ಬಳಿಗೆ ಹೋಗುವರು. ಅವರು ಹೇಳುವರು - ನಾನು ಅದಕ್ಕೆ ಅರ್ಹನಲ್ಲ. ನೀವು ಮುಹಮ್ಮದ್ [ಸ]ರವರ ಬಳಿಗೆ ಹೋಗಿರಿ. ಹಾಗೆ ಅವರು ನನ್ನ ಬಳಿಗೆ ಬರುವರು. ಆಗ, ನಾನದನ್ನು ಮಾಡುವೆನೆಂದು ನಾನು ಹೇಳುವೆ.
ನಾನು ಶಿಫಾರಸು ಮಾಡಲಿಕ್ಕಾಗಿ ನನ್ನ ಪ್ರಭುವಿನ ಅನುಮತಿ ಕೇಳುವೆ. ನನಗೆ ಅನುಮತಿ ಸಿಗುವುದು. ಆ ಸಂದರ್ಭದಲ್ಲಿ ಅಲ್ಲಾಹನನ್ನು ಸ್ತುತಿಸಬೇಕಾದ ಸ್ತುತಿ ವಚನಗಳನ್ನು ಅವನು ನನ್ನ ಮನಸ್ಸಿಗೆ ಹಾಕುವನು. ಈಗ ಅದು ನನಗೆ ನೆನಪಾಗುವುದಿಲ್ಲ. ಹಾಗೆ ನಾನು ಸ್ತುತಿ ವಚನಗಳಿಂದ ಅವನನ್ನು ಸ್ತುತಿಸುವೆ. ನಾನವನ ಮುಂದೆ ಸಾಷ್ಟಾಂಗದಲ್ಲಿ ಬೀಳುವೆ. ಆಗ ಹೇಳಲಾಗುವುದು. ಓ ಮುಹಮ್ಮದ್[ಸ]! ನಿನ್ನ ತಲೆಯೆತ್ತು. ನಿನ್ನ ಮಾತು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು, ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಪ್ರಭೂ! ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನಿಂದ ಉತ್ತರ ಬರುವುದು - ಯಾರಾದರೂ ಹೃದಯದಲ್ಲಿ ಬಾರ್ಲಿಯಷ್ಟಾದರೂ ಈಮಾನ್ ಇದ್ದಾರೆ ಹೋಗಿ ಅವರನ್ನು ನರಕದಿಂದ ವಿಮೋಚಿಸು. ನಾನು ಹೋಗಿ ಹಾಗೆಯೇ ಮಾಡುವೆ.
ಮರಳಿ ಬಂದು ನಾನು ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸುತ್ತಾ ಸಾಷ್ಟಾಂಗವೆರಗುವೆ. ಆಗ ಅಲ್ಲಾಹ್ ಹೇಳುವನು - ಓ ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಪ್ರಭೂ! ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನು ಹೇಳುವನು: ಯಾರದೇ ಹೃದಯದಲ್ಲಿ ಸಾಸಿವೆ ಕಾಳಿನಷ್ಟೂ ಈಮಾನ್ ಇದ್ದರೆ ಅಂತಹವರನ್ನು ನರಕದಿಂದ ವಿಮೋಚಿಸು. ನಾನು ಹೋಗಿ ಹಾಗೆಯೇ ಮಾಡುವೆ.
ಮರಳಿ ಬಂದು ನಾನು ಪುನಃ ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸಿ ಸಾಷ್ಟಾಂಗವೆರಗುವೆ. ಆಗ ಅಲ್ಲಾಹನು ಹೇಳುವನು - ಹೇಳುವನು - ಓ ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಅಂಗೀಕರಿಸಲಾಗುವುದು. ಆಗ ನಾನು ಹೇಳುವೆ - ನನ್ನ ಸಮುದಾಯ, ನನ್ನ ಸಮುದಾಯ! ಆಗ ಅಲ್ಲಾಹನು ಹೇಳುವನು - ಯಾರಾದರೂ ಹೃದಯದಲ್ಲಿ ಸಾಸಿವೆ ಕಾಳಿಗಿಂತಲೂ ಕಡಿಮೆ, ಅತಿ ಕಡಿಮೆ, ಇನ್ನೂ ಕಡಿಮೆ ಪ್ರಮಾಣದಲ್ಲಿ ಈಮಾನ್ ಇದ್ದರೆ ಅಂತಹವರನ್ನು ನೀನು ಹೋಗಿ ನರಕದಿಂದ ಹೊರ ತಾ! ನಾನು ಹೋಗಿ ಹಾಗೆಯೇ ಮಾಡುವೆ.
ಅನಸ್ [ರ]ರಿಂದ ಇನ್ನೊಂದು ವರದಿ ಹೀಗಿದೆ - ತರುವಾಯ ನಾಲ್ಕನೆಯ ಬಾರಿಯೂ, ನಾನು ಮರಳಿ ಬಂದು ಅದೇ ಅದೇ ಸ್ತುತಿ ವಚನಗಳಿಂದ ಅಲ್ಲಾಹನನ್ನು ಸ್ತುತಿಸುವೆ ಮತ್ತು ಅವನ ಮುಂದೆ ಸಾಷ್ಟಾಂಗವೆರಗುವೆ. ಆಗ ಅಲ್ಲಾಹ್ ಹೇಳುವನು - ಓ ಮುಹಮ್ಮದ್! ತಲೆಯೆತ್ತು. ನಿನ್ನ ಮಾತನ್ನು ಆಲಿಸಲಾಗುವುದು. ಕೇಳು, ನೀಡಲಾಗುವುದು. ಶಿಫಾರಸು ಮಾಡು ಸ್ವೀಕರಿಸಲಾಗುವುದು. ಆಗ ನಾನು ಹೇಳುವೆ - ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ (ಲಾ ಇಲಾಹ ಇಲ್ಲಲ್ಲಾಹ್) ಎಂದು ಹೇಳಿದವರನ್ನೆಲ್ಲ ನರಕದಿಂದ ವಿಮೋಚಿಸಲು ನನಗೆ ಅನುಮತಿ ನೀಡು. ಆಗ ಅಲ್ಲಾಹನು ಹೇಳುವನು - ನನ್ನ ಪ್ರತಾಪ, ನನ್ನ ಮಹಾನತೆ, ನನ್ನ ಮೇಲೆ ಮತ್ತು ನನ್ನ ದೊಡ್ಡಸ್ತಿಕೆಯಾಣೆ! ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲವೆಂದು ಹೇಳಿದ ಎಲ್ಲರನ್ನೂ ಖಂಡಿತವಾಗಿಯೂ ನರಕದಿಂದ ವಿಮೋಚಿಸುವೆ.
[ಸಹೀಹ್ ಬುಖಾರಿ, ಅಧ್ಯಾಯ ತೌಹೀದ್ (ಏಕದೇವತ್ವ)]
No comments:
Post a Comment