ಹ. ಕಅಬ್ ಬಿನ್ ಮಾಲಿಕ್ [ರ] ಹೇಳುತ್ತಾರೆ - ಪ್ರವಾದಿಯವರು [ಸ]
ನಾವು ಮೂವರೊಡನೆ (ಅಂದರೆ ನನ್ನೊಡನೆ, ಹಿಲಾಲ್ ಬಿನ್ ಉಮಯ್ಯಾ ಮತ್ತು ಮುರಾರ ಬಿನ್ ರಬೀಹ್ರೊಡನೆ)
ಯಾರೂ ಮಾತನಾಡಬಾರದೆಂದು ಸಹಾಬಿಗಳಿಗೆ ಕಟ್ಟಾಜ್ಜೆ ವಿಧಿಸಿದ್ದರು. ಯಾಕೆಂದರೆ ನಮ್ಮೊಂದಿಗೆ ಒಡನಾಟವನ್ನು
ಬಿಟ್ಟುಬಿಟ್ಟರು. ನಮ್ಮ ಗುರುತೇ ಅವರಿಗಿಲ್ಲವೆಂಬಂತೆ ಅವರು ಬದಲಾಗಿ ಬಿಟ್ಟರು. ಎಲ್ಲಿಯವರೆಗೆಂದರೆ
ಮದೀನಾದ ಭೂಭಾಗವು ನಮಗೆ ಪರಕೀಯವಾಗಿ ಬಿಟ್ಟಿತು. ಅದು ಈಗ ನಮ್ಮ ಪರಿಚಯದ ಮದೀನಾ ಆಗಿರಲಿಲ್ಲ. ಅದೇ
ಸ್ಥಿತಿಯಲ್ಲಿ ಐವತ್ತು ದಿನಗಳನ್ನು ನಾವು ಕಳೆದೆವು.
ನನ್ನ ಇಬ್ಬರು ಸಂಗಾತಿಗಳಾದ ಹಿಲಾಲ್ ಮತ್ತು ಮುರಾರರ ಮೇಲೆ ಈ ಬಹಿಷ್ಕಾರವು
ಬಹಳಷ್ಟು ಪರಿಣಾಮ ಬೀರಿತು. ಅವರಿಬ್ಬರೂ ದುಃಖಿತರಾಗಿ ಕಣ್ಣೇರಿಳಿಸುತ್ತಾ ತಮ್ಮ ಮನೆಗಳಲ್ಲೇ ಉಳಿದು
ಬಿಟ್ಟರು. ನಾನು ಯುವಕನಾಗಿದ್ದೆ. ನನ್ನ ಮನಸ್ಸು ಗಟ್ಟಿಯಾಗಿತ್ತು. ಅದುದರಿಂದ ನಾನು ಮನೆಯಿಂದ ಹೊರಟು
ಬಂದು ಮುಸ್ಲಿಮರೊಂದಿಗೆ ನಾಮೂಹಿಕ ನಮಾಝ್ನಲ್ಲಿ ಭಾಗವಹಿಸುತ್ತಿದ್ದೆ. ಪೇಟೆಗಳಲ್ಲೂ ಸಂಚರಿಸುತ್ತಿದ್ದೆ.
ಆದರೆ ಯಾರೂ ನನ್ನೊಡನೆ ಮಾತಾಡುತ್ತಿರಲಿಲ್ಲ. ಪ್ರವಾದಿ [ಸ] ನಮಾಝ್ ಮುಗಿಸಿ ತಮ್ಮ ಸ್ಥಳದಲ್ಲಿ ಕುಳಿತಾಗ
ಅವರ ಬಳಿಗೆ ಹೋಗಿ ಸಲಾಮ್ ಹೇಳುತ್ತಿದ್ದೆ. ಅನಂತರ ಅವರು ನನ್ನ ಸಲಾಮಿಗೆ ಉತ್ತರಿಸಿದ್ದಾರೋ ಇಲ್ಲವೋ
ಎಂದು ಮನದಲ್ಲೇ ಯೋಚಿಸುತ್ತಿದ್ದೆ. ನಾನು ಅವರ ಬಳಿಯಲ್ಲಿ ನಮಾಝ್ ಮಾಡುತ್ತಿದ್ದೆ. ಅವರು ನನ್ನತ್ತ
ನೋಡುತ್ತಿದ್ದರು. ನಮಾಝ್ ಮುಗಿದ ನಂತರ ನಾನು ಅವರನ್ನು ನೋಡಿದಾಗ ಅವರು ಮುಖ ತಿರುಗಿಸುತ್ತಿದ್ದರು.
ಈ ರೀತಿ ಮುಸ್ಲಿಮರು ದೀರ್ಘಕಾಲ ನನ್ನಿಂದ ಮುಖ ತಿರುಗಿಸಿದಾಗ ಅದು ನನ್ನನ್ನು ತುಂಬಾ ನೋಯಿಸಿತು. ಆಗ
ನಾನು ಅಬೂಕತಾದರ [ರ] ತೋಟದ ಗೋಡೆ ಹಾರಿ ಅವರ ಬಳಿ ಹೋದೆ. (ಅವರು ಬಾಗಿಲು ಮುಚ್ಚಿದ್ದುದರಿಂದ ನಾನು
ಗೋಡೆ ಹಾರಿದ್ದೆ). ಅವರು ನನ್ನ ಚಿಕ್ಕಪ್ಪನ ಪುತ್ರನೂ ನನ್ನ ಆಪ್ತ ಮಿತ್ರನೂ ಆಗಿದ್ದರು. ನಾನು ಅವರಿಗೆ
ಸಲಾಮ್ ಹೇಳಿದೆ. ಆದರೆ ಅವರು ಉತ್ತರಿಸಲಿಲ್ಲ. ಅನಂತರ ಎರಡನೆ ಬಾರಿ ಆಣೆ ಹಾಕಿ ಸಲಾಮ್ ಹೇಳಿದೆ. ಆದರೂ
ಆರು ಮೌನವಾಗಿದ್ದರು. ಪುನಃ ಮೂರನೇ ಬಾರಿ ಹೀಗೆಂದೆ - ಅಬೂಕತಾದ! ಅಲ್ಲಾಹನ ಆಣೆ ಹಾಕಿ ನಾನು ನಿಮ್ಮೊಂದಿಗೆ
ಕೇಳುತ್ತೇನೆ. ನನಗೆ ಅಲ್ಲಾಹನ ಮತ್ತು ಅವನ ಪ್ರವಾದಿಯ ಮೇಲೆ ಪ್ರೀತಿಯಿದೆಯೆಂಬುದು ನಿಮಗೆ ತಿಳಿಯದೇ?
ಆಗ ಅವರು ಹೇಳಿದರು - ಅದನ್ನು ಅಲ್ಲಾಹ್ ಮತ್ತು ಅವನ ಪ್ರವಾದಿಯವರೇ ಬಲ್ಲರು (ನಿಮಗೆ ಅಲ್ಲಾಹ್ ಮತ್ತು
ಅವನ ಪ್ರವಾದಿಯವರ ಮೇಲೆ ಪ್ರೀತಿಯಿದೆಯೇ ಎಂಬುದಕ್ಕೆ
ಅವರಿಂದಲೇ ಪುರಾವೆ ಕೇಳಿರಿ) ಆಗ ನನ್ನ ಕಣ್ಣುಗಳಿಂದ ಅಶ್ರುಧಾರೆ ಹರಿಯಿತು. ನಾನು ಗೋಡೆ ಹಾರಿ
ಹೊರ ಬಂದೆ. (ವರದಿ: ಅಬ್ದುಲ್ಲಾ ಬಿನ್ ಕಅಬ್ ಬಿನ್ ಮಾಲಿಕ್ [ರ])
[ಬುಖಾರಿ, ಮುಸ್ಲಿಮ್]
No comments:
Post a Comment